December 18, 2023

ಬೆಂಗಳೂರಿನಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ಲೀನಿಯರ್ ಆಕ್ಸರಲೇಟರ್ ರೆಡಿಯೇಷನ್ ಥೆರಪಿ ಸೇವೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಅಸಮಾನತೆಯಿರುವ ಕಾಲಮಾನದಲ್ಲಿ ಕ್ರಿಶ್ಚಿಯನ್ ಸಮುದಾಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಸೇವೆ ಶ್ಲಾಘನೀಯವಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು. 

ಉಡುಪಿ ಹಾಗೂ ಮಂಗಳೂರಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಈ ಸಮುದಾಯ ಒಳ್ಳೆಯ ಬುನಾದಿಯನ್ನು ಹಾಕಿದೆ. ಭಾರತೀಯ ಸಮಾಜದಲ್ಲಿ ಬಹುಸಂಖ್ಯಾತ ಜನ ಅಕ್ಷರಸಂಸ್ಕೃತಿಯಿಂದ ವಂಚಿತರಾಗಿದ್ದರು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಸಮುದಾಯ ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ. ಇದೇ ರೀತಿಯ ಸೇವೆ ಮುಂದುವರೆಯಲಿ ಎಂದು ತಿಳಿಸಿದರು.

ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆ ಗುಣಪಡಿಸುವ ಆಧುನಿಕ ಚಿಕಿತ್ಸಾ ವಿಧಾನವಾದ ಲೀನಿಯರ್ ಆಕ್ಸರಲೇಟರ್ ರೆಡಿಯೇಷನ್ ಥೆರಪಿ ಸೇವೆಯನ್ನು ಇಂದು ಉದ್ಘಾಟಿಸಲಾಗಿದೆ. ಪ್ರಥಮ ಹಂತದಲ್ಲಿ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಿದರೆ, ರೋಗವನ್ನು ಗುಣಪಡಿಸಬಹುದು. ಕಡೆಯ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದಾಗ, ಕಾಯಿಲೆ ಉಲ್ಬಣಗೊಳ್ಳದಿರಲು ಈ ಅತ್ಯಾಧುನಿಕ ಚಿಕಿತ್ಸೆ ಸಹಕಾರಿಯಾಗಿದೆ. ಈ ಆಸ್ಪತ್ರೆಗೆ ಹಳ್ಳಿಗಾಡಿನ ಜನರು ಹೆಚ್ಚು ಬರುವುದರಿಂದ ಇಲ್ಲಿನ ವೈದ್ಯರು ಕನ್ನಡದಲ್ಲಿ ಮಾತನಾಡುವುದರಿಂದ ರೋಗಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ.

ಶ್ರೀಮಂತರು ಉತ್ತಮ ಹಾಗೂ ದುಬಾರಿ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ದಿನನಿತ್ಯ ಜೀವನಕ್ಕಾಗಿ ಹೋರಾಡುವ ಬಡಜನರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆ ನೀಡುವ ಬ್ಯಾಪ್ಟಿಸ್ಟ್ ಆಸ್ಪತ್ರೆ ಜನಸೇವೆಯಲ್ಲಿ ನಂಬಿಕೆ ಇರಿಸಿದೆ. ಬ್ಯಾಪ್ಟಿಸ್ಟ್ ಆಸ್ಪತ್ರೆಯು ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುತ್ತಾ ಬಂದಿದೆ. ಸರ್ಕಾರಿ ಆಸ್ಪತ್ರೆಯಂತೆ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಡರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಸರ್ಕಾರ ಈ ಆಸ್ಪತ್ರೆಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.