ವೈಕುಂಠ ಏಕಾದಶಿ ಪ್ರಯುಕ್ತ ಶರವಣ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ಬೆಂಗಳೂರಿನ ಎಲ್ಲ ವೆಂಕಟೇಶ್ವರ ದೇವಾಲಯಗಳಿಗೆ ಒಟ್ಟು '1 ಲಕ್ಷ ಲಡ್ಡು ಪ್ರಸಾದ' ವಿತರಣೆಗೆ ಚಾಲನೆ
ಬೆಂಗಳೂರು, ಡಿಸೆಂಬರ್ 29, 2025 :
ವೈಕುಂಠ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತರಿಗಾಗಿ ವಿಶಿಷ್ಟ ಸೇವಾ ಕಾರ್ಯವಾಗಿ 1 ಲಕ್ಷ ಲಡ್ಡು ಪ್ರಸಾದ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಬೆಂಗಳೂರಿನ ಬಸವನಗುಡಿಯ ಡಿವಿಜಿ ರಸ್ತೆಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ 3ನೇ ಮಹಡಿಯಲ್ಲಿರುವ ಶ್ರೀ ಸಾಯಿ ಪಾರ್ಟಿ ಹಾಲ್ನಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಬಳಿಕ ಲಡ್ಡು ಪ್ರಸಾದ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ವೈಕುಂಠ ಏಕಾದಶಿಯಂದು ಬೆಂಗಳೂರಿನ ಎಲ್ಲ ವೆಂಕಟೇಶ್ವರ ದೇವಾಲಯಗಳಿಗೆ ಒಟ್ಟು 1 ಲಕ್ಷ ಲಡ್ಡು ಪ್ರಸಾದವನ್ನು ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ ಎಂದು ಅಧ್ಯಕ್ಷರಾದ ಟಿ. ಎ. ಶರವಣ ಅವರು ತಿಳಿಸಿದರು.
ಈ ಸೇವಾ ಕಾರ್ಯದ ಅಂಗವಾಗಿ ಬೆಂಗಳೂರಿನ ವಿವಿಧ ವೆಂಕಟೇಶ್ವರ ದೇವಾಲಯಗಳಿಗೆ ಒಟ್ಟು 1 ಲಕ್ಷ ಲಡ್ಡು ಪ್ರಸಾದವನ್ನು ವಿತರಿಸಲಾಗಿದ್ದು, ಭಕ್ತರಿಂದ ಉತ್ತಮ ಸ್ಪಂದನೆ ದೊರಕಿತು. ವೈಕುಂಠ ಏಕಾದಶಿ
ದಿನ ಮಹಾವಿಷ್ಣು ವೈಕುಂಠದ ಬಾಗಿಲು ತೆರೆಯುತ್ತಾನೆ ಎಂಬ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಈ ಸೇವೆಯನ್ನು ಭಕ್ತಿಭಾವದಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನ ಪರಿಷತ್ ಶಾಸಕರು ಹಾಗೂ ಶರವಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಟಿ.ಎ. ಶರವಣ ಅವರು ವಹಿಸಿದ್ದರು. ಶರವಣ ಚಾರಿಟಬಲ್ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಹಾಗೂ ಮಾನವೀಯ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಸೇವೆ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆಯಲ್ಲಿ ನಟಿ ಅನುಷಾ ರೈ, ಟ್ರಸ್ಟ್ ಸದಸ್ಯರು, ಸ್ವಯಂಸೇವಕರು ಹಾಗೂ ಭಕ್ತರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.