ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ಮೈದಳೆದ ಜಾನಪದ ಸಾಂಸ್ಕೃತಿಕ ಸೊಗಡು: ವಿವಿಧ ಕಲಾ ಪ್ರಕಾರಗಳ ಅನಾವರಣ

*ಗೊಂಬೆಗಳು ಮನುಷ್ಯನ ಜೀವನದ ಮೌಲ್ಯಗಳು ಮತ್ತು ಆತ್ಮ ಸಾಕ್ಷಾತ್ಕಾರದ ಪ್ರತೀಕ: ಡಾ. ದತ್ತಾತ್ರೆಯ ಅರಳಿಕಟ್ಟೆ*

*ಬೆಂಗಳೂರು, ನ, 10;* ಗೊಂಬೆಗಳು ಮನುಷ್ಯನ ಜೀವನದ ಮೌಲ್ಯಗಳು ಮತ್ತು ಆತ್ಮ ಸಾಕ್ಷಾತ್ಕಾರದ ಪ್ರತೀಕವಾಗಿವೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಬೊಂಬೆ ಆಟದ ಕಲಾವಿದ ಡಾ. ದತ್ತಾತ್ರೆಯ ಅರಳಿಕಟ್ಟೆ ಹೇಳಿದರು.

ಬಸವನಗುಡಿಯ ದಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕದಿಂದ ಆಯೋಜಿಸಿದ್ದ ರಾಜ್ಯೋತ್ಸವ, ದಸರಾ ಮತ್ತು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಬೊಂಬೆಯಾಟದ ಮೂಲಕ ವಿದ್ಯಾರ್ಥಿ ಸಮುದಾಯದೊಂದಿಗೆ ಸಂವಾದ ನಡೆಸುತ್ತಾ ಮಾತನಾಡಿದ ಅವರು, ಒಂದು ಸಣ್ಣ ಬೊಂಬೆ ಹಲವು ಕಥೆಗಳನ್ನು ಹೇಳುತ್ತದೆ. ಬೊಂಬೆಯಾಟ ನಶಿಸುತ್ತಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ಜನತೆ ಇಂತಹ ಜಾನಪದ ಕಲೆಗಳಿಗೆ ಜೀವ ತುಂಬಬೇಕು. ಪೋಷಿಸಿ ಬೆಳಸಬೇಕು ಎಂದರು.

ದಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಡಾ. ಎಚ್.ಎನ್. ಸುಬ್ರಮಣ್ಯ ಮಾತನಾಡಿ, ಗ್ರಾಮೀಣ ಕಲೆಗಳು, ಗ್ರಾಮೀಣ ಸೊಗಡನ್ನು ನಗರದ ವಿದ್ಯಾರ್ಥಿಗಳಿಗೆ ಪರಿಚಯಿಸಿಕೊಡುವ ಉದ್ದೇಶದಿಂದ ರಾಜ್ಯೋತ್ಸವ, ದಸರಾ ಮತ್ತು ದೀಪಾವಳಿ ಹಬ್ಬಗಳನ್ನು ಒಟ್ಟಿಗೆ ಆಚರಿಸಲಾಗಿದೆ. ಕಲೆ ಮತ್ತು ಸಂಸ್ಕೃತಿಯಿಂದ ಜೀವನದ ಮೌಲ್ಯಗಳು ಮತ್ತಷ್ಟು ಪಕ್ವಗೊಳ್ಳುತ್ತವೆ ಎಂದು ಹೇಳಿದರು.

ಶಾಲಾ ವಿದ್ಯಾರ್ಥಿಗಳಿಂದ ಸುಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಮಾದರಿಯಲ್ಲಿ ದಸರಾ ಮೆರವಣಿಗೆ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರು ವಿಶೇಷವಾಗಿ ಪ್ರದರ್ಶಿಸಿದ ಡೊಳ್ಳುಕುಣಿತ ಆಕರ್ಷಣೀಯವಾಗಿತ್ತು. ಕಾಲೇಜು ಆವರಣದಲ್ಲಿ ವೀರಗಾಸೆ, ಕಂಸಾಳೆ, ಹುಲಿವೇಷ, ಕೊಡವ ಸಂಪ್ರದಾಯಿಕ ಉಡುಗೆ, ತೊಡುಗೆ, ಬಹುತೇಕ ಎಲ್ಲಾ ಜಾನಪದ ಕಲಾ ಪ್ರಕಾರಗಳು ಅನಾವರಣಗೊಂಡವು. ರಂಗೋಲಿ ಸೇರಿ ಹಲವು ಸ್ಪರ್ಧೆಗಳನ್ನು ಸಹ ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ದಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ವಿ. ವೆಂಕಟಶಿವಾರೆಡ್ಡಿ, ಜಂಟಿ ಕಾರ್ಯದರ್ಶಿ ಸುಧಾಕರ್ ಇಸ್ತೂರಿ, ನ್ಯಾಷನಲ್ ಇಂಗ್ಲೀಷ್ ಸ್ಕೂಲ್ ನ ಅಧ್ಯಕ್ಷರಾದ ಪಾವನ, ಜಿ.ಎಂ. ರವೀಂದ್ರ, ಪಿ.ಎಲ್. ವೆಂಕಟರಾಮ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.